ಕಾರವಾರ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ರೂಪಾಲಿ ಎಸ್.ನಾಯ್ಕ ಅವರ ಎದುರು ಸ್ಪರ್ಧಿಸಲು ಹೆದರಿ ಚುನಾವಣಾ ಕಣದಿಂದ ಓಡಿಹೋದ ಆನಂದ್ಗೆ ರೂಪಾಲಿ ನಾಯ್ಕ ಅವರ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ ಎಂದು ಬಿಜೆಪಿಯ ಮಹಿಳಾ ಪ್ರಮುಖರು ತಿರುಗೇಟು ನೀಡಿದ್ದಾರೆ.
ರೂಪಾಲಿ ಎಸ್.ನಾಯ್ಕ ಅವರಿಗೆ ಜಿಲ್ಲಾ ಪಂಚಾಯಿತಿ ಸದಸ್ಯರಾಗಲು ಯೋಗ್ಯತೆ ಇಲ್ಲ ಎಂದಿದ್ದಾರೆ. ಈ ಕ್ಷೇತ್ರದ ಜನತೆ ಮನೆಮಗಳಂತೆ ಕಂಡು ಅವರನ್ನು ಶಾಸಕರನ್ನಾಗಿ ಮಾಡಿದ್ದರು. ಈ ಬಾರಿಯೂ ಗೆಲುವಿನ ಸಮೀಪಕ್ಕೆ ಬಂದು ಅಲ್ಪಮತಗಳ ಅಂತರದಿಂದ ಸೋತಿದ್ದಾರೆ. ಅವರ ಅರ್ಹತೆ ಏನು ಎನ್ನುವುದು ಈ ಕ್ಷೇತ್ರದ ಮತದಾರರಿಗೆ, ಜನತೆಗೆ ಗೊತ್ತಿದೆ. ಆನಂದ್ ಅವರೇ ನಿಮಗೆ ರೂಪಾಲಿ ಎಸ್.ನಾಯ್ಕ ವಿರುದ್ಧ ಚುನಾವಣೆಗೆ ನಿಲ್ಲುವ ಯೋಗ್ಯತೆಯೂ ಇಲ್ಲ ಎನ್ನುವುದು ಕಳೆದ ಚುನಾವಣೆಯಲ್ಲೇ ಗೊತ್ತಾಗಿದೆ. ಮೇಲಾಗಿ ನಿಮ್ಮ ಹೇಳಿಕೆ ಪರೋಕ್ಷವಾಗಿ ಕ್ಷೇತ್ರದ ಮತದಾರರು, ಜನತೆಯನ್ನೂ ಅವಮಾನಿಸಿದಂತೆ ಆಗಿದೆ ಎಂದಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಯ ಬಳಿ ಜೋಳಿಗೆ ಒಡ್ಡಿ ಚುನಾವಣಾ ಕಣದಿಂದ ಓಡಿಹೋದಾಗಲೆ ನಿಮ್ಮ ಸಾಮರ್ಥ್ಯ ಎಷ್ಟು ಎನ್ನುವುದು ಈ ಕ್ಷೇತ್ರದ ಪ್ರತಿಯೊಬ್ಬರಿಗೂ ಅರ್ಥವಾಗಿದೆ. ನೀವು ತುಂಬಾ ಬುದ್ಧಿವಂತರು ಅಂದುಕೊಂಡಿದ್ದೀರಿ. ಹೇಳಲಿಕ್ಕೆ ಒಂದು ಪಕ್ಷವೇ ಇಲ್ಲ ಎಂಬಂತಾಗಿದೆ ನಿಮ್ಮ ಪರಿಸ್ಥಿತಿ. ಪ್ರಧಾನಿ ನರೇಂದ್ರ ಮೋದಿ, ಸಂಸದರಾದ ಅನಂತಕುಮಾರ್ ಹೆಗಡೆ ಅವರ ಹೆಸರನ್ನು ಹೇಳಿಕೊಂಡು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ನಾಟಕವಾಡಿ ಮತ್ತೆ ಕಾಂಗ್ರೆಸ್ ಅಭ್ಯರ್ಥಿಯ ಜೊತೆ ಹೊಂದಾಣಿಕೆ ಮಾಡಿಕೊಂಡು ಪಲಾಯನ ಮಾಡುವ ನಿಮ್ಮ ದುರ್ಬುದ್ಧಿಗೆ ಏನು ಹೇಳಬೇಕೆಂದು ತಿಳಿಯುತ್ತಿಲ್ಲ ಎಂದಿದ್ದಾರೆ.
ರೂಪಾಲಿ ಎಸ್.ನಾಯ್ಕ ಒಬ್ಬ ಮಹಿಳೆಯಾಗಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡಿರುವುದನ್ನು ಸಹಿಸಿಕೊಳ್ಳಲು ನಿಮ್ಮಿಂದ ಆಗುತ್ತಿಲ್ಲ. ಅಧಿಕಾರದಲ್ಲಿದ್ದಾಗ ಲೂಟಿ ಹೊಡೆಯುವುದು, ಮೋಜು ಮಸ್ತಿ ನಡೆಸುವುದನ್ನು ಮಾಡಿದ್ದರ ಕರ್ಮವನ್ನು ನೀವೀಗ ಅನುಭವಿಸುತ್ತಿದ್ದೀರಿ. ನಿಮ್ಮನ್ನು ಈಗ ಯಾರೂ ನಂಬುತ್ತಿಲ್ಲ. ಯಾವ ಪಕ್ಷವೂ ಸಮೀಪಕ್ಕೆ ಬಿಟ್ಟುಕೊಳ್ಳುತ್ತಿಲ್ಲ. ಸಾಮರ್ಥ್ಯ ಇದ್ದರೆ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿ ಠೇವಣಿಯನ್ನಾದರೂ ಉಳಿಸಿಕೊಳ್ಳಿ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಘೋಷಣೆಯಾಗುತ್ತಿದ್ದಂತೆ ಅವರು ಎಸೆಯುವ ಬಿಸ್ಕತ್ಗಾಗಿ ಕಾದು ಕುಳಿತಿದ್ದೀರಿ ಎನ್ನುವುದು ಕ್ಷೇತ್ರದ ಜನತೆಯೇ ಹೇಳುತ್ತಿದ್ದಾರೆ. ನಿಮ್ಮ ಯೋಗ್ಯತೆಗೆ ಇನ್ನೇನು ಬೇಕು. ಮಹಿಳೆಯರ ಬಗ್ಗೆ ಮನಸ್ಸಿಗೆ ಬಂದAತೆ ಮಾತನಾಡುವ ಮುನ್ನ ಯೋಚಿಸಿ. ರಾಜಕೀಯವಾಗಿ ನೀವೊಂದು ಮುಗಿದ ಅಧ್ಯಾಯ. ಅಪ್ರಸ್ತುತವಾಗಿರುವ ನೀವು ವ್ಯರ್ಥ ಪ್ರಲಾಪ ಮಾಡಬೇಡಿ ಎಂದಿದ್ದಾರೆ.
ರೂಪಾಲಿ ಎಸ್.ನಾಯ್ಕ ಸ್ವಾರ್ಥಕ್ಕಾಗಿ ಯಾವತ್ತೂ ರಾಜಕೀಯ ಮಾಡಿಲ್ಲ. ಅವರು ರಾಜಕೀಯವನ್ನು ಸಮಾಜಸೇವೆ ಎಂದುಕೊAಡಿದ್ದಾರೆ. ರೂಪಾಲಿ ಎಸ್.ನಾಯ್ಕ ಹಾಗೂ ನಮ್ಮ ಪಕ್ಷದ ಕಾರ್ಯಕರ್ತರ ಸಂಘಟನೆಯ ಪರಿಣಾಮವಾಗಿ ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಇಂದು ಬಲಿಷ್ಠವಾಗಿ ರೂಪುಗೊಂಡಿದೆ. ಇದನ್ನು ಮನಗಂಡಿರುವ ಭಾರತೀಯ ಜನತಾ ಪಕ್ಷವೂ ಅವರಿಗೆ ಆಶೀರ್ವದಿಸಿದೆ. ಅವರ ಬೆಂಬಲಕ್ಕಿದೆ. ಜನಸೇವೆ ಮಾಡಿಕೊಂಡು ಬಂದ ರೂಪಾಲಿ ನಾಯ್ಕ ಅವರಿಗೆ ನಿಮ್ಮ ಬುದ್ಧಿವಾದ ಬೇಕಿಲ್ಲ. ನಿಮ್ಮ ತಾಯಿಯ ಬಗ್ಗೆ ಗೌರವ ಇದೆ. ಅವರ ಆರೋಗ್ಯ ಬೇಗ ಸುಧಾರಿಸಲಿ ಎಂದು ಪ್ರಾರ್ಥಿಸುತ್ತೇವೆ. ಆದರೆ ನೀವು ಅನಾರೋಗ್ಯದಿಂದ ಇರುವ ನಿಮ್ಮ ತಾಯಿಯ ಸೇವೆ ಮಾಡಿ ಪಾಪದ ಕೊಡವನ್ನು ಸ್ವಲ್ಪಮಟ್ಟಿಗಾದರೂ ಇಳಿಸಿಕೊಳ್ಳಿ. ಇದು ನಿಮಗೆ ಕೊನೆಯ ಎಚ್ಚರಿಕೆ ಎಂದಿದ್ದಾರೆ.
ಬಿಜೆಪಿ ಗ್ರಾಮೀಣ ಪ್ರಧಾನ ಕಾರ್ಯದರ್ಶಿ ಸುಜಾತ ಬಾದೇಕರ್, ಅಮದಳ್ಳಿ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷೆ ಆಶಾ ನಾಯ್ಕ್, ಚಂಡಿಯಾ ಗ್ರಾಮ ಪಂಚಾಯತಿ ಅಧ್ಯಕ್ಷೆ ಪೂಜಾ ನಾಯ್ಕ್, ಕಲ್ಪನಾ ನಾಯ್ಕ್, ಸಾಕ್ಷಿ ಹಾರೋಡೆಕರ್, ಗ್ರಾಮೀಣ ಬಿಜೆಪಿಯ ಮಹಿಳಾ ಅಧ್ಯಕ್ಷೆ ಅಶ್ವಿನಿ, ನಗರ ಮಹಿಳಾ ಅಧ್ಯಕ್ಷೆ ವೃಂದಾ ಧಾಮಸಾಡೇಕರ್, ರೇಷ್ಮಾ ವೇರ್ಣೇಕರ್, ದೀಪಾಲಿ ನಾಯ್ಕ, ವಾಸಂತಿ ಗುನಗಿ, ಅನುಶ್ರೀ ಕುಬಡೆ, ವೈಶಾಲಿ ತಾಂಡೆಲ್, ರೋಷನಿ ಮಾಳಸೇಕರ್, ಸುನಿತಾ ಸಾರಂಗ, ಸಂಜನಾ ನಾಯ್ಕ, ವಿಜಯ ಅಣ್ವೇಕರ್, ಸುಜಾತ ಮಡಿವಾಳ, ಸುರೇಖಾ ಮಾಳಸೇಖರ್ ಈ ಜಂಟಿ ಹೇಳಿಕೆ ನೀಡಿದ್ದಾರೆ.